ನವದೆಹಲಿ: ಕೇಂದ್ರ ಸರ್ಕಾರ 500, 1000 ರೂ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿರುವ ಕ್ರಮದ ಬಗ್ಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ದಾರೆ. ನೋಟುಗಳನ್ನು ರದ್ದುಗೊಳಿಸಿರುವುದರ ಹಿಂದೆ ದೊಡ್ದ ಹಗರಣವಿದೆ ಎಂದು ದೆಹಲಿ ಸಿಎಂ ಆರೋಪಿಸಿದ್ದು, ನೋಟು ರದ್ದತಿ ನಿರ್ಧಾರ ಜಾರಿಗೊಳ್ಳುವ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ತಮಗೆ ಬೇಕಾದವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು ಎಂದು ಆರೋಪಿಸಿದ್ದಾರೆ.
ಕಪ್ಪುಹಣ, ಭ್ರಷ್ಟಾಚಾರದ ವಿರುದ್ಧದ ಹೋರಾಟದ ಹೆಸರಿನಲ್ಲಿ ಎನ್ ಡಿಎ ಸರ್ಕಾರ ದೊಡ್ಡ ಹಗರಣ ನಡೆಸಿದ್ದು, ಪ್ರಧಾನಿ ಮೋದಿ ಈ ನಿರ್ಧಾರವನ್ನು ಘೋಷಿಸುವುದಕ್ಕೂ ಮುನ್ನವೇ ಕಪ್ಪುಹಣ ಹೊಂದಿರುವ ತಮ್ಮ ಕೆಲವು ಆಪ್ತರಿಗೆ ಮಾಹಿತಿಯನ್ನು ನೀಡಿದ್ದರು, ಆದ್ದರಿಂದ ಕೇಂದ್ರ ಸರ್ಕಾರದ ನೋಟ್ ರದ್ದತಿಯಿಂದ ಉಂಟಾಗಬೇಕಿದ್ದ ಪರಿಣಾಮದಿಂದ ಭ್ರಷ್ಟರು, ಕಪ್ಪುಹಣ ಹೊಂದಿರುವವರು ತಪ್ಪಿಸಿಕೊಂಡಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಇನ್ನು ಬ್ಯಾಂಕ್ ಗಳಲ್ಲಿ ಜಮಾವಣೆಯಾಗುತ್ತಿರುವ ಹಣದ ಬಗ್ಗೆಯೂ ತಪ್ಪು ವರದಿ ನೀಡಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಕಳೆದ ತ್ರೈಮಾಸಿಕಗಳಲ್ಲಿ ಬ್ಯಾಂಕ್ ಗಳಲ್ಲಿನ ಹಣ ಜಮಾವಣೆ ಪ್ರಮಾಣ ಕಡಿಮೆ ಇತ್ತು. ಆದರೆ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಠೇವಣಿ ಪ್ರಮಾಣ ಅಪಾರ ಪ್ರಮಾಣದಲ್ಲಿ ಏರಿಕೆಯಾಗಿದೆ, ಈ ಎಲ್ಲಾ ಹಣ ಯಾರಿಗೆ ಸೇರಿದ್ದು ಎಂದು ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
500, 1000 ರೂ ನೋಟ್ ಗಳನ್ನು ರದ್ದು ಮಾಡಿರುವುದರಿಂದ ಬ್ಯಾಂಕಿಂಗ್ ವ್ಯಸ್ಥೆಯಿಂದ ಹೊರಗಿರುವ ಅಪಾರ ಪ್ರಮಾಣದ ಹಣ ವ್ಯವಸ್ಥೆಯೊಳಗೆ ಹರಿದುಬರಲಿದೆ ಎಂದು ಹೇಳಲಾಗುತ್ತಿದೆ. ಆದರೆ ಕೇವಲ ಹಣ ಕೈಯಿಂದ ಕೈಗೆ ಬದಲಾಗುತ್ತಿದೆಯಷ್ಟೇ, ಇದಕ್ಕಾಗಿ ಜನರಿಗೆ ಅನಾನುಕೂಲ ಉಂಟುಮಾಡಲಾಗುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ಇನ್ನು ಕಪ್ಪುಹಣ ಹೊಂದಿರುವವರು ಅದನ್ನು ಬ್ಯಾಂಕ್ ನಲ್ಲಿ ಜಮಾ ಮಾಡಲು ಮುಂದಾದರೆ ಶೇ.200 ರಷ್ಟು ದಂಡ ಹಾಕಲಾಗುತ್ತದೆ, ಅಂದರೆ ಶೇ.90 ರಷ್ಟು ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ. ಕಪ್ಪುಹಣ ಹೊಂದಿರುವ ಯಾವ ವ್ಯಕ್ತಿ ತಾನೆ ಈ ರೀತಿ ಮಾಡಲು ಸಾಧ್ಯ? ಕೇಂದ್ರ ಸರ್ಕಾರ ಕಪ್ಪುಹಣ ಹೊಂದಿರುವವರಿಗೆ ಬ್ಯಾಂಕ್ ನಲ್ಲಿ ಹಣ ಜಮಾ ಮಾಡದಿರಲು ಪರೋಕ್ಷವಾಗಿ ಹೇಳುತ್ತಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
No comments:
Post a Comment